ಹಜರತ್ ಅಲಿ ಇಬ್ನ್ ಅಬೀ ತಾಲಿಬ್ ಪ್ರವಾದಿ ಮುಹಮ್ಮದ್ (ಅವರ ಮೇಲೆ ದೇವನ ಅನುಗ್ರಹವಿರಲಿ) ರವರ ಅಳಿಯ. ಅಳಿಯನಿಗಿಂತಲೂ ಹೆಚ್ಚು ಆತ್ಮೀಯರೂ ಸಹ. ಅಲೀ ಎಳೆ ಪ್ರಾಯದಲ್ಲೇ ಪ್ರವಾದಿಗಳ ಸಂಗಾತಿಗಳಾಗಿದ್ದವರು, ಇಸ್ಲಾಂ ಧರ್ಮದ ದೀಕ್ಷೆ ಪಡೆದ ಮೊದಲ ವ್ಯಕ್ತಿಗಳಲ್ಲಿ ಒಬ್ಬರೂ ಹೌದು. ಒಮ್ಮೆ ಪ್ರವಾದಿಗಳು ಅಲಿ ಯವರನ್ನು ಕೇಳಿದರು, ಅಲೀ, ನಿಮಗೆ ಐದು ಸಾವಿರ ಕುರಿಗಳು ಬೇಕೋ? ಸಾತ್ವಿಕ ಬದುಕಿಗೆ ಬೇಕಾದ ಐದು ಸೂತ್ರಗಳೋ? ಅಲಿ ಮುಗುಳ್ನಗುತ್ತಾ ಹೇಳುತ್ತಾರೆ ಐದು ಸಾವಿರ ಕುರಿಗಳು ಅತಿಯಾದವು, ಆದರೆ ಬದುಕಿಗೆ ಬೇಕಾದ ಐದು ಸೂತ್ರಗಳು ನನಗೆ ಸಾಕು, ಅವನ್ನು ಹೇಳಿಕೊಡಿ ಎಂದಾಗ ಪ್ರವಾದಿಗಳು ನುಡಿಯುತ್ತಾರೆ,
೧.ದೇವ ಸ್ಮರಣೆ ಮತ್ತು ಪ್ರಾರ್ಥನೆ.. ಅಲ್ಲಾಹ್, ನನ್ನ ಪಾಪಗಳನ್ನು ಕ್ಷಮಿಸು,
೨. ನನ್ನನ್ನು ಹೊಂದಾಣಿಕೆ ಮಾಡಿಕೊಳ್ಳುವವರಲ್ಲಿ ಒಬ್ಬನನ್ನಾಗಿಸು,
೩. ನನ್ನ ದುಡಿಮೆ ನ್ಯಾಯಸಮ್ಮತವಾಗಿಸು,
೪. ನೀನು ನನಗೆ ಕೊಟ್ಟಿದ್ದರಲ್ಲಿ ತೃಪ್ತಿ ಪಡುವಂತೆ ಮಾಡು
೫. ಮತ್ತು ನೀನು ನನಗಾಗಿ ಏನನ್ನು ಬಯಸುವುದಿಲ್ಲವೋ ಆ ವಸ್ತುಗಳ ಕಡೆ ನನ್ನ ಮನಸ್ಸು ಹೊರಳದಂತೆ ಮಾಡು.
ವಿಶ್ವಾಸ, ಹೊಂದಾಣಿಕೆ, ನ್ಯಾಯಸಮ್ಮತ ದುಡಿಮೆ, ಇರುವುದರಲ್ಲಿ ತೃಪ್ತಿ, ಅತಿಯಾಸೆ ಪಡದಿರುವುದು ಇವು ಮೇಲಿನ ಪ್ರವಾದಿ ಸಂದೇಶದ ತಿರುಳು. ಸೃಷ್ಟಿ ಕರ್ತನ ಮೇಲಿನ ವಿಶಾಸ, ಜನರೊಂದಿಗೆ, ಅವರ ವಿಚಾರಗಳೊಂದಿಗೆ ಹೊಂದಾಣಿಕೆ, ನ್ಯಾಯವಾದ ದುಡಿಮೆ, ನಮಗಿರುವುದರಲ್ಲಿ ತೃಪ್ತಿ, ಮತ್ತು ನಮಗೆ ಬೇಡದ ವಿಷಯಗಳ ವಸ್ತುಗಳ ಕುರಿತು ಆಸಕ್ತಿ, ಈ ವಿಷಯಗಳ ಬಗ್ಗೆ ನಾವು ಜಾಗರೂಕರಾಗಿ ಬದುಕನ್ನು ನಡೆಸಿದರೆ ಅದೇ ಸಾತ್ವಿಕ ಬದುಕು ಅಲ್ಲವೇ?